ದಾವಣಗೆರೆ ಕೆಎಸ್ಆರ್‍ ಟಿಸಿ ನೂತನ ಬಸ್ ನಿಲ್ದಾಣಕ್ಕೆ ಚನ್ನಯ್ಯ ವಡೇಯರ್ ಹೆಸರಿಡಲು ಒತ್ತಾಯ

ಸುದ್ದಿ360 ದಾವಣಗೆರೆ ಡಿ.26:  ನಗರದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಸಂಸದರಾಗಿದ್ದ ಚನ್ನಯ್ಯ ವಡೇಯರವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಹರಿಹರ ತಾಲ್ಲೂಕು ಕುರುಬರ ಸಂಘ ಒತ್ತಾಯಿಸುವುದಾಗಿ ಸಂಘದ ಸಂಚಾಲಕ ಡಾ. ಕರಿಬಸಯ್ಯ ಮಠದ ತಿಳಿಸಿದ್ದಾರೆ.

ಈ ಕುರಿತು ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಚನ್ನಯ್ಯ ವಡೇಯರವರು ದಾವಣಗೆರೆ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದು, ದಾವಣಗೆರೆಯ ಅಭಿವೃದ್ಧಿಗಾಗಿ ಶ್ರಮಿಸಿದವರಾಗಿದ್ದಾರೆ. ಅವರ ಹೆಸರನ್ನು ಸರ್ಕಾರ ಇದುವರೆಗೆ ಎಲ್ಲಿಯೂ ನಾಮಕರಣ ಮಾಡಿರುವುದಿಲ್ಲ.  ಇದೀಗ ನಿರ್ಮಾಣವಾಗುತ್ತಿರುವ ಸರ್ಕಾರಿ ಬಸ್ ನಿಲ್ದಾಣಕ್ಕೆ ಚನ್ನಯ್ಯ ವಡೇಯರವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಹರಿಹರ ತಹಶೀಲ್ದಾರರು, ದಾವಣಗೆರೆ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದರೊಂದಿಗೆ ಸಂಘ ಒತ್ತಾಯಿಸುತ್ತಿರುವುದಾಗಿ ಅವರು ಹೇಳಿದರು.

ಸಂಘದ ಅಧ್ಯಕ್ಷ ಹಾಲೇಶಪ್ಪ ಪೂಜಾರ್ ಮಾತನಾಡಿ, ಸರ್ಕಾರದ ಆದೇಶವಿರುವಂತೆ ಸಾರ್ವಜನಿಕ ರಸ್ತೆ ಕಟ್ಟಡಗಳಿಗೆ ಕೀರ್ತಿಶೇಷರಾದವರ ಹೆಸರನ್ನು ನಾಮಕರಣ ಮಾಡಬೇಕು ಎಂಬುದಾಗಿ ಇದ್ದು, ಚನ್ನಯ್ಯ ವಡೆಯರವರ ಹೆಸರನ್ನು ನಾಮಕರಣ ಮಾಡುವ ಮೂಲಕ ದಾವಣಗೆರೆಯ ಅಭಿವೃದ್ಧಿಗೆ ಅವರು ನೀಡಿರುವ ಸೇವೆಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಈ ಕುರಿತು ಬುಧವಾರ ಬೆಳಿಗ್ಗೆ ಬೆಳಗಾವಿಗೆ ತೆರಳಿ ಮುಖ್ಯಮಂತ್ರಿಗಳಿಗೂ, ಜಿಲ್ಲಾಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಚಂದ್ರಪ್ಪ ಎನ್. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖ್ಯ ಸಂಚಾಲಕ ಪರಮೇಶ್ವರಪ್ಪ ಜಿ., ಖಜಾಂಚಿ ರೇವಣಸಿದ್ದಪ್ಪ ಕೊಪ್ಪದ ಸಿ., ಬೀರಪ್ಪ ಪೂಜಾರ, ಬಿ. ನಾರಾಯಣಪ್ಪ, ಬಿ. ಮರೆದಪ್ಪ ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!