ರಸ್ತೆಯಲ್ಲಿ ಅಪಾಯಕಾರಿ ಗುಂಡಿ – ಬರೀ ಆರೋಪ ಮಾಡದೆ ಪರಿಸ್ಥಿತಿಯ ಹತೋಟಿಗೆ ಮುಂದಾದ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್

ಸದಾ ಟೆಂಡರ್ ಪ್ರಕ್ರಿಯೆ, ಯೋಜನೆ ಸಿದ್ಧತೆಯ ಹಾರಿಕೆ ಉತ್ತರ ನೀಡುವ ಪಾಲಿಕೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಸುದ್ದಿ360, ದಾವಣಗೆರೆ, ಜು.19: ದಾವಣಗೆರೆ ಮಹಾನಗರ ಪಾಲಿಕೆ ಕುರಿತು ವಿಪಕ್ಷಗಳ ಆರೋಪಕ್ಕೆ ಪುಷ್ಠಿ ನೀಡುವ ಸಂಗತಿಯೊಂದನ್ನು ಸ್ಥಳೀಯ ನಾಗರೀಕರು ಬಯಲಿಗೆಳೆದಿದ್ದಾರೆ. ನರಕಸದೃಶ ಗುಂಡಿಗಳಿಂದ ಬೇಸತ್ತ ಜನತೆ ಪಾಲಿಕೆ ನೀಡುವ ಪಾಲಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ಮಹಾನಗರ ಪಾಲಿಕೆ ದಿವಾಳಿಯಾಗಿದೆ. ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ. ಸಣ್ಣ ಪುಟ್ಟ ರಿಪೇರಿ ಕೆಲಸಗಳೂ ಪಾಲಿಕೆಯಿಂದ ಆಗುತ್ತಿಲ್ಲ. ಎಲ್ಲದಕ್ಕೂ ಆಡಳಿತ ಪಕ್ಷ ಬಿಜೆಪಿಯಿಂದ ಬರೀ ಹಾರಿಕೆಯ ಉತ್ತರಗಳು ಬರುತ್ತವೆ ಎನ್ನುವ ವಿಪಕ್ಷ ನಾಯಕರ ಹೇಳಿಕೆಗೆ ಈ ಘಟನೆ ಬಹಳಷ್ಟು ಪುಷ್ಟಿ ನೀಡುತ್ತದೆ.

ನಗರದ ಈರುಳ್ಳಿ‌ ಮಾರ್ಕೆಟ್ ಬಳಿಯ ಎಪಿಎಂಸಿ‌ ಮೇಲ್ಸೇತುವೆ ಕೆಳಗಡೆಯ ಫೋಟೊಗಳನ್ನು ನೋಡಿದರೆ ಅಲ್ಲಿನ ವಾಸ್ತವದ ಗಂಭೀರತೆಯನ್ನು ಅರಿತುಕೊಳ್ಳಬಹುದಾಗಿದೆ.

ಗಡಿಗುಡಾಳ್ ಮಂಜುನಾಥ್ ನೇತೃತ್ವದಲ್ಲಿ ತಾತ್ಕಾಲಿಕ ರಿಪೇರಿ

ಜನರಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡು ಮಂಜುನಾಥ್ ಗಡಿಗುಡಾಳ್ ಹಾಗೂ ಸಾವಂತ್ ಜೈನ್ ಅವರು ಸ್ಥಳೀಯರಿಂದ ಹಣ ಸಂಗ್ರಹಿಸಿ ಕಬ್ಬಿಣದ ರಾಡ್ ಗಳಿಗೆ ವೆಲ್ಡಿಂಗ್ ಮಾಡಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ನೆರವಾಗಿದ್ದಾರೆ.

ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಮಹಿಳೆಯರು, ಪುರುಷರು, ಯುವಕರು, ಯುವತಿಯರು, ಧಾವಂತದಲ್ಲಿ ಹೋಗುವ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಖಚಿತ. ಆದಷ್ಟು ಬೇಗ ಈ ಸಮಸ್ಯೆ ಪರಿಹರಿಸಬೇಕು. ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಬೇಕು. ಪೈಪ್ ಗಳನ್ನು ಅಗತ್ಯಬಿದ್ದರೆ ಬದಲಾಯಿಸಿ, ತ್ಯಾಜ್ಯ ಸಂಗ್ರಹವಾಗಿದ್ದರೆ ತೆಗೆಸಿ ನೀರು ಹರಿದು ಹೋಗಲು ಕ್ರಮ ಕೈಗೊಳ್ಳಿ. ಮಹಾನಗರ ಪಾಲಿಕೆಯ ಮೇಯರ್, ಆಯುಕ್ತರು ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಮಂಜುನಾಥ್ ಗಡಿಗುಡಾಳ್ ಆಗ್ರಹಿಸಿದ್ದಾರೆ.

ಈ ಸ್ಥಳದಲ್ಲಿ ಕಾರುಗಳು, ಲಾರಿ, ಬಸ್, ಆಂಬುಲೆನ್ಸ್ ವಾಹನಗಳು ಸಿಲುಕಿಕೊಂಡಿರುವುದು ಸೇರಿದಂತೆ ದ್ವಿಚಕ್ರ ವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆಗಳು ಸಾಕಷ್ಟು ಬಾರಿ ಸಂಭವಿಸಿವೆ. ಇವುಗಳನ್ನು ಗಮನಿಸಿದ ಸ್ಥಳೀಯರು ಮತ್ತು ವಿಪಕ್ಷ ನಾಯಕರು ಪಾಲಿಕೆಯ ಗಮನಕ್ಕೆ ತಂದಿದ್ದಾರೆ. ಪಾಲಿಕೆಯಿಂದ ಸೂಕ್ತ ಸ್ಪಂದನೆ ದೊರೆಯದೆ, ಅಲ್ಲಿನ ಸ್ಥಳೀಯರು ಸೇರಿ, ರಸ್ತೆ ಮಧ್ಯದಲ್ಲಿನ ನೀರು ತುಂಬಿರುವ ದೊಡ್ಡ ಗುಂಡಿ ವಾಹನ ಸವಾರರ ಗಮನಕ್ಕೆ ಬರಲೆಂದು ದೊಡ್ಡ ಕಲ್ಲನ್ನು ಗುರುತಿಗೆ  ಇಟ್ಟಿದ್ದಾರೆ. ಇಲ್ಲಿ ಕಾಲಿಟ್ಟರೆ ಸಾಕು  ಉಸುಕಿನಂತ ಮಣ್ಣಿನೊಳಗೆ ಕಾಲು ಹೋಗುತ್ತದೆ‌. ಇನ್ನು ನೀರು ಹರಿದು ಹೋಗಲು ಅಳವಡಿಸಿರುವ ಪೈಪ್ ಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ನೀರು ಹೊರ ಹೋಗುತ್ತಿಲ್ಲ. ಮಳೆ ಬಂದರೆ ಇಲ್ಲಿ ಓಡಾಡಲು ಸಾಧ್ಯವಿಲ್ಲದ ಮಾತು.

ಸಂಬಂಧಪಟ್ಟವರ ಗಮನಕ್ಕೆ ತಂದರೆ ಕೇವಲ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ. ಸೇತುವೆ ಕೆಳಭಾಗದಲ್ಲಿ ಮೂರು ಕಡೆಗಳಲ್ಲಿ ಕಬ್ಬಿಣದ ಜಾಲರಿ ಹಾಕಿದ್ದು, ಮೂರು ಕಡೆಗಳಲ್ಲಿಯೂ ದೊಡ್ಡದಾದ ಗುಂಡಿ ಬಿದ್ದಿದೆ. ಮಳೆ ಬಂದಾಗ ಇಲ್ಲಿ ನೀರು ಉಕ್ಕಿ ಹರಿಯುವುದರಿಂದ ನಡೆದಾಡಲು ಆಗದು.

ರಸ್ತೆಯ ಇಕ್ಕೆಲಗಳಲ್ಲಿ ಕಬ್ಬಿಣದ ರಾಡುಗಳ ಜಾಲರಿ ಅಳವಡಿಕೆ ಮಾಡಲಾಗಿದ್ದು,ರಸ್ತೆ ಮಧ್ಯದಲ್ಲಿ‌‌ ನೀರು ಹರಿಯುವ ಕಾರಣ ಜಾಲರಿಯ ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಹಾಳಾಗಿವೆ. ಕಾರಣ ಇಲ್ಲಿ ಓಡಾಡುವ ವಾಹನ ಸವಾರ, ಪಾದಚಾರಿ ಸೊಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು.

ಈಗಾಗಲೇ ವಾಹನ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳು ನಡೆಯುತ್ತಲೇ ಇವೆ. ಮಹಾನಗರ ಪಾಲಿಕೆಯ ಆಡಳಿತ ವರ್ಗ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಕೆಂಡಮಂಡಲರಾಗಿದ್ದಾರೆ.

ಇನ್ನು ರಾತ್ರಿಯದು ಬೇರೆಯೇ ಕಥೆ

ಇಲ್ಲಿ ವಿದ್ಯುತ್ ದೀಪ ಇಲ್ಲ. ಇದರಿಂದಾಗಿ ರಾತ್ರಿ ವೇಳೆ ಕಳ್ಳರ ಭಯ ಇದೆ. ಪೂರ್ತಿ ಕತ್ತಲಾಗಿರುವ ಕಾರಣ ಜನರು ಭಯದಲ್ಲೇ ಮನೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ಆರೋಪ.

ಎಪಿಎಂಸಿ ಮೇಲ್ ಸೇತುವೆಯ ಕೆಳಭಾಗದಲ್ಲಿ ಕೆಳ ಸೇತುವೆ ನಿರ್ಮಿಸಲಾಗಿದೆ.  ಅದು ತೀರಾ ಅವೈಜ್ಞಾನಿಕವಾಗಿದ್ದು ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗಿಲ್ಲ. ಮಳೆ ಬಂತೆಂದರೆ ಮೊಣಕಾಲುದ್ದ ನೀರು, ಇನ್ನು ಸಾಮಾನ್ಯ ದಿನಗಳಲ್ಲಿ ರಾತ್ರಿ ಸಂಚರಿಸಲು ವಿದ್ಯುತ್ ವ್ಯವಸ್ಥೆಯಿಲ್ಲ. ಕಳ್ಳರಿಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಆದರೆ ಇದರ ಬಗ್ಗೆ ರೈಲ್ವೆ ಇಲಾಖೆಯಾಗಲಿ ಪಾಲಿಕೆಗಾಗಲಿ ಗಮನವೇ ಇಲ್ಲ. ಸರಿಪಡಿಸುವ ಗೋಜಿಗೂ ಹೋಗಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

ಪಾಲಿಕೆ ಆಡಳಿತ ಯಂತ್ರ ಸೂಕ್ತ ಪರಿಹಾರ ಒದಗಿಸದಿದ್ದರಿಂದ ಇಲ್ಲಿನ ಅವ್ಯವಸ್ಥೆಗೆ ಬೇಸತ್ತ ಸ್ಥಳೀಯರು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ‌. ಎಸ್. ಮಂಜುನಾಥ್ ಗಡಿಗುಡಾಳ್ ಅವರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಮಂಜುನಾಥ್ ಗಡಿಗುಡಾಳ್ ರವರು ಕೂಡಲೇ ಎಂಜಿನಿಯರ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು‌.

ಸ್ಥಳಕ್ಕೆ ಆಗಮಿಸಿದ ಎಂಜಿನಿಯರ್ ಅವರಿಗೆ ನಾನು ಕಳೆದ ಎರಡು ತಿಂಗಳ ಹಿಂದೆಯೇ ಗಮನಕ್ಕೆ ತಂದಿದ್ದರೂ ಯಾಕೆ ಸರಿಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಕಾರ್ಯರೂಪಕ್ಕೆ ಬರಬೇಕು ಅಷ್ಟೇ ಎಂಬ ಉತ್ತರ ನೀಡಿದ್ದಾರೆ.

ಅಲ್ಲಿ ತನಕ ಜನರು ಏನು ಮಾಡಬೇಕು. ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ನೋಡಿದರೆ ಎಂಥ ಅನಾಹುತ ಆಗಬಹುದು ಎಂದು ನಿಮಗೇ ಗೊತ್ತಾಗುತ್ತದೆಯಲ್ವಾ ಎಂದು ಪ್ರಶ್ನಿಸಿ, ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಿದ್ದಾರೆ.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಕೆ. ಜಿ. ಶಿವಕುಮಾರ್, ಗಾಡಿ ಧರ್ಮಣ್ಣ, ಜಾನ್, ವೆಂಕಟೇಶ್, ಜಗದೀಶ್, ವೀರೇಶ್, ಮುನಿಸ್ವಾಮಿ, ದಾದಾಪೀರ್, ಅಬ್ದುಲ್, ರಫಿಕ್, ಅಮರೇಗೌಡ, ಕೃಷ್ಣಪ್ಪ ಮತ್ತಿತರರು ಇದ್ದರು.

admin

admin

Leave a Reply

Your email address will not be published. Required fields are marked *

error: Content is protected !!