ಮಹಿಳೆ ನಾಪತ್ತೆ ಪ್ರಕರಣ – ಫೋನ್ ಪೇ ಮೂಲಕ 50 ಸಾವಿರ ಲಂಚ – ಪಿಎಸ್ಐ, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

ಸುದ್ದಿ360 ದಾವಣಗೆರೆ, ಏ.22: ಮಹಿಳೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯ ಮಾಡಲು ಪೋನ್ ಪೇ ಮೂಲಕ ಲಂಚದ ಹಣ ಸ್ವೀಕರಿಸಿದ್ದ ದಾವಣಗೆರೆ ಗ್ರಾಮಾಂತರ ಠಾಣೆ ಪಿಎಸ್ಐ ಶಿವನಗೌಡ ಹಾಗೂ ಕಾನ್ಸ್ಟೇಬಲ್ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಇವರಿಬ್ಬರು  ನಾಪತ್ತೆ ಪ್ರಕರಣದಲ್ಲಿ ಕಾಣೆಯಾದ ಮಹಿಳೆಯನ್ನು ಜೊತೆಗೆ ಕಳಿಸಿಕೊಡಲು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ತಾಳೆಕಟ್ಟೆ ಗ್ರಾಮದ ಕೆ.ರಂಗಸ್ವಾಮಿ ಎಂಬುವರಿಗೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ರಂಗಸ್ವಾಮಿ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆರೋಪಿತರು ಲಂಚದ ಹಣವನ್ನು ನೇರವಾಗಿ ಸ್ವೀಕರಿಸದೆ, ಪೋನ್ ಪೇ ಮೂಲಕ ನೀಡುವಂತೆ ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದರು. ಅದರಂತೆ ಶನಿವಾರ ಬೆಳಗ್ಗೆ ಇಬ್ಬರೂ ಫೋನ್ ಪೇ ಮೂಲಕ 50 ಸಾವಿರ ರೂ. ಲಂಚದ ಹಣ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆದಿದೆ.

admin

admin

Leave a Reply

Your email address will not be published. Required fields are marked *

error: Content is protected !!