‘ಮುನಿಸಿಕೊಳ್ಳದ, ತೆಗಳದ, ಜಗಳವಾಡದ ಈ ಪುಸ್ತಕ ಸ್ನೇಹ ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ’

ಪುಸ್ತಕ ಪಂಚಮಿ ಕಾರ್ಯಕಮದಲ್ಲಿ ಶಿಕ್ಷಣಾಧಿಕಾರಿ ಬಿ.ಎಂ. ದಾರುಕೇಶ್

ಸುದ್ದಿ360 ದಾವಣಗೆರೆ ಜ.5: ಎಂದಿಗೂ ಮುನಿಸಿಕೊಳ್ಳದ, ಜಗಳವಾಡದ, ತೆಗಳದ, ಬೇಸರ ಮೂಡಿಸದ ಮತ್ತು ಮುಖ್ಯವಾಗಿ ಸನ್ಮಾರ್ಗದತ್ತ ನಡೆಸುವ ಉತ್ತಮ ಸ್ನೇಹಿತನೆಂದರೆ ಶ್ರೇಷ್ಠ ಪುಸ್ತಕಗಳಾಗಿವೆ. ಅಂತಹ ಪುಸ್ತಕಗಳನ್ನು ವಿದ್ಯಾರ್ಥಿಗಳು ತಮ್ಮ ಆಪ್ತ ಸಂಗಾತಿಗಳನ್ನಾಗಿ ಮಾಡಿಕೊಂಡರೆ ಅವುಗಳ ಮಾರ್ಗದರ್ಶನ ಜೀವನದ ಕಡೆಯವರೆಗೂ ಇರುತ್ತದೆ ಎಂದು ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಕಾರಿ ಬಿ.ಎಂ. ದಾರುಕೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಪಿಜೆ ಬಡಾವಣೆಯ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಡಾ.ಎಚ್.ಎಫ್ ಕಟ್ಟೀಮನಿ ಪ್ರೌಢ ಶಿಕ್ಷಣ ಪ್ರತಿಷ್ಠಾನದಿಂದ ಬುಧವಾರ ಹಮ್ಮಿಕೊಂಡಿದ್ದ ಪುಸ್ತಕ ಪಂಚಮಿ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ,  ಮೊಬೈಲ್‌ನ್ನು ತಲೆತಗ್ಗಿಸಿ ನೋಡಿದರೆ ಅದು ನೀವು ಎಂದೂ ಎಲೆ ಎತ್ತದಂತೆ ಮಾಡುತ್ತದೆ. ಆದರೆ, ತಲೆತಗ್ಗಿಸಿ ಪುಸ್ತಕ ಓದಿದರೆ ಅದು ನೀವು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಎಂದರು.

ನಮ್ಮಜ್ಜರ ದೊಡ್ಡ ಕನಸಿದು

ಪ್ರಾಸ್ತಾವಿಕವಾಗಿ ಮಾತನಾಡಿದ ಖ್ಯಾತ ಮಕ್ಕಳ ತಜ್ಞ ಡಾ.ಸಿ.ಆರ್. ಬಾಣಾಪುರಮಠ್, ಪ್ರತಿ ಹಳ್ಳಿಗಳಲ್ಲೂ ಶಾಲೆಗಳು ತೆರೆಯಬೇಕು ಎಂಬುದು ನಮ್ಮ ಅಜ್ಜನವರಾಗಿದ್ದ ಡಾ. ಹುಚ್ಚುಯ್ಯ ಫಕ್ಕೀರಯ್ಯ ಕಟ್ಟೀಮನಿ ಅವರ ಬಹುದೊಡ್ಡ ಕನಸಾಗಿತ್ತು. ಈ ಆಶಯದೊಂದಿಗೆ ಅವರು ಹಗಲು, ಇರುಳೆನ್ನದೆ ಊರೂರು ಸುತ್ತಿದರು. ಅವರ ಸ್ಮರಣಾರ್ಥ ನಗರದ 12 ಶಾಲೆಗಳ 68 ವಿದ್ಯಾರ್ಥಿಗಳಿಗೆ ಶಬ್ಧಕೋಶ, ವ್ಯಾಕರಣ, ಪ್ರಬಂಧ, ಅಟ್ಲಾಸ್, ಜ್ಯಾಮಿಟ್ರಿ, ಕವಿ-ವಿಜ್ಞಾನಿಗಳ ಪರಿಚಯ, ಕ್ವಿಜ್, ಸಾಮಾನ್ಯ ಜ್ಞಾನ, ಇತಿಹಾಸ, ರಾಮಾಯಣ, ಮಹಾಭಾರತ ಸೇರಿ ಅಂದಾಜು 440 ರೂ. ಮೌಲ್ಯದ ಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪುಸ್ತಕ ಪಂಚಮಿ ಕಾರ್ಯಕ್ರಮವನ್ನು ಈಶ್ವರಮ್ಮ ಶಾಲೆ ಆಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್. ಸುಜಾತಾ ಕೃಷ್ಣ ಉದ್ಘಾಟಿಸಿದರು. ಸಮಾರಂಭದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಕಾರಿ ಪ್ರಕಾಶ್ ಬೂಸ್ನೂರ್, ಈಶ್ವರಮ್ಮ ಶಾಲೆ ಆಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್. ಸುಜಾತಾ ಕೃಷ್ಣ, ಶಾಲೆ ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್, ಗ್ರಂಥಪಾಲಕ ಪುರಾಣಿಕಮಠ್, ಕನ್ನಡ ಶಿಕ್ಷಕಿ ಬಿ. ಶ್ರೀದೇವಿ ಇತರರಿದ್ದರು.

Leave a Comment

error: Content is protected !!