ರಾಜಕಾರಣಿಗಳು ಕೆಡುವುದಕ್ಕೆ ಮತದಾರರೇ ಕಾರಣ

ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಸಭೆಯಲ್ಲಿ ದಿನೇಶ್ ಅಮೀನ್ ಮಟ್ಟು ಅಭಿಮತ

ಸುದ್ದಿ360, ಶಿವಮೊಗ್ಗ: ಇಂದು ರಾಜಕಾರಣಿಗಳು ಕೆಡುವುದಕ್ಕೆ ಅವರನ್ನು ಆರಿಸಿ, ಅಧಿಕಾರ ನೀಡಿರುವ ಜನರೇ ಕಾರಣವಾಗಿದ್ದಾರೆ. ಇಂದಿನ ರಾಜಕಾರಣಿಗಳು ಶಾಂತವೇರಿ ಗೋಪಾಲ ಗೌಡರ ಹತ್ತಿರಕ್ಕೂ ತಲುಪಿಲ್ಲ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ಪೀಪಲ್ಸ್ ಲಾಯರ್ಸ್ ಗಿಲ್ಡ್ , ಅಹರ್ನಿಶಿ ಪ್ರಕಾಶನ ಶಿವಮೊಗ್ಗ .ಜನ ಪ್ರಕಾಶನ ಬೆಂಗಳೂರು ಏರ್ಪಡಿಸಿದ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಹಾಗೂ ಶಾಸನ ಸಭೆಯಲ್ಲಿ ಶಾಂತವೇರಿ ಮತ್ತು ಸಮಾಜವಾದದ ಸಹ್ಯಾದ್ರಿ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇಂದು ಆಯ್ಕೆಯಾದ ರಾಜಕಾರಣಿಗಳಲ್ಲಿ ಅವಿದ್ಯಾವಂತರು ಇದ್ದಾರೆ. ಶೇ 40ರಷ್ಟು ಕ್ರಿಮಿನಲ್ಸ್ ಗಳಿದ್ದಾರೆ. ಕರ್ನಾಟಕದಲ್ಲಿ ಒಂದು ಪಕ್ಷದ ಶಾಸಕರು ಪಕ್ಷಾಂತರ ಮಾಡಿ ರಾಜೀನಾಮೆ ನೀಡಿ ಪುನಃ ಚುನಾವಣೆಗೆ ಬೇರೆ ಪಕ್ಷದಿಂದ ನಿಲ್ಲುತ್ತಾರೆ. ಆದರೆ ಜನ ಅವರನ್ನು ಗೆಲ್ಲಿಸುತ್ತಾರೆ ಎಂದರು.

ಪಂಚಮಹಾಪಾತಕ ಮಾಡಿದ ಪಾಪಿಗಳು ಕೂಡ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಆದರೆ ಗೋಪಾಲಗೌಡರು ಯಾವ ಪಾತಕ ಮಾಡದೇ ಜನರಿಂದ ರಾಜಕೀಯ ಅರಿವು ಕಡಿಮೆಯಿದ್ದ ಕಾಲದಲ್ಲೂ ಜಾತಿಮತ ನೋಡದೆ ಮೂರು ಬಾರಿ ಗೆದ್ದಿದ್ದರು. ಲಕ್ಷಾಂತರ ಹಣ ಖರ್ಚು ಮಾಡಿದ ಬದರೀನಾರಾಯಣ ಅಯ್ಯಂಗಾರರು ಸೋತರು. ಆಗಿನ ಜನ ಗುಣ ನೋಡುತ್ತಿದ್ದರೆ ವಿನಾ ಹಣವನ್ನಲ್ಲ ಎಂದು ಹೇಳಿದರು.

ಗೋಪಾಲಗೌಡರು ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ನವರಿಗೆ ವಿಧಾನಸೌಧ ಕ್ಕೆ ಹೆಚ್ಚು ಹಣ ಖರ್ಚಾಗಿದೆ ಜನರ ಹಣ ದುಂದು ವೆಚ್ಚ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು.

ಈಗ ವಿಧಾನಸೌಧ ದಲ್ಲಿ ಪ್ರಶ್ನೆ ಮಾಡುವವರೂ ಯಾರು ಇಲ್ಲ. ಗೋಪಾಲಗೌಡರು ಸಾಹಿತ್ಯ ಸಂಸ್ಕೃತಿ ತಿಳಿದುಕೊಂಡಿದ್ದರು. ಅದು ಅವರನ್ನು ಹೆಚ್ಚು ಮಾನವೀಯರನ್ನಾಗಿಸಿತು. ಇಂದು ರಾಜಕಾರಣಿಗಳು ಅಜ್ಞಾನವನ್ನೇ ಮಾನದಂಡ ಮಾಡಿಕೊಂಡಿದ್ದಾರೆ. ಅವರ ಪ್ರಣಾಳಿಕೆ ಸುಳ್ಳು ಭರವಸೆ ಆಗಿದೆ. ರೈತರಪರ ಪ್ರಣಾಳಿಕೆ ಯಲ್ಲಿ ಸಾಲಮನ್ನಾ ಎಂಬ ಭರವಸೆಯನ್ನು ನೀಡಿದ್ದರು ಕೂಡ ಇದುವರೆಗೆ ಈಡೇರಿಸಿಲ್ಲ ಆದರೆ ಜನ ಕೂಡ ಅದನ್ನು ಪ್ರಶ್ನೆ ಮಾಡದಿರುವುದು ಆಶ್ಚರ್ಯಕರ ಮತ್ತು ದುಃಖಕರವಾಗಿದೆ ಎಂದರು.

ಗೋಪಾಲಗೌಡರು ಯಾವುದೇ ಮುಲಾಜಿಲ್ಲದೆ ರಾಜಕಾರಣ ಮಾಡುತ್ತಿದ್ದರು. ಅವರು ತಮ್ಮ ಸಿದ್ದಾಂತಕ್ಕೆ ಬದ್ಧರಾಗಿದ್ದರು ಎಂದರು.

ಹಿರಿಯ ಸಮಾಜವಾದಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಮಾತನಾಡಿ ನಾನು ಮನುಷ್ಯ ನಾಗಿದ್ದರೆ ಅದಕ್ಕೆ ಗೋಪಾಲಗೌಡರು ಕಾರಣ ಅವರು ಮೊದಲ ಐದು ವರ್ಷ ಮಾಡಿದ ಸದನದ ಭಾಷಣವನ್ನು ಪುಸ್ತಕ ರೂಪಕ್ಕೆ ತಂದೆ. ಮತ್ತೆ ಹತ್ತುವರ್ಷಗಳ ಬಗ್ಗೆ ತರಲು ಗೌಡರು ಅನುಮತಿ ನೀಡಲಿಲ್ಲ ಎಂದು ಗೌಡರ ಬಗ್ಗೆ ಬರೆದ ಕವನ ಓದಿದರು.

ಸಿದ್ದಯ್ಯ ಪಾಟೀಲ್ ಮಾತನಾಡಿ 29ನೇವಯಸ್ಸಿಗೆ ಚಳುವಳಿ ಹಿನ್ನೆಲೆಯಿಂದ ಬಂದ ಗೋಪಾಲಗೌಡರು ಸದನದಲ್ಲಿ ಇನಾಂ ಭೂಮಿ ರದ್ದತಿಗೆ ಹೋರಾಡಿದರು. ರಾಜ್ಯಪಾಲರ ಭಾಷಣದ ಪ್ರತಿ ಇಂಗ್ಲಿಷ್ ನಲ್ಲಿ ಇದ್ದುದರಿಂದ ಅವರು ಅದನ್ನು ಹರಿದು ಕಾಲಲ್ಲಿ ತುಳಿದರು. ಅವರು ರೈತ ಕಾರ್ಮಿಕರು ಮತ್ತು ನಿಜವಾದ ಧರ್ಮದ ಬಗ್ಗೆ ಮಾತನಾಡಿದರು ಮತ್ತು ಕಾನೂನಾತ್ಮಕ ಹೋರಾಟ ಮಾಡಿ ಸದನ ಸರಿಯಾಗಿ ನಡೆಯುವಂತೆ ಮಾಡಿದರು. ಅಂದು ಭೂಸುಧಾರಣೆ ಮೌಲ್ಯ ಇಂದು ಭೂಸ್ವಾಧೀನ ಮೌಲ್ಯ ವಾಗಿದೆ. ಗೌಡರು ಕರ್ನಾಟಕದ ಏಕೀಕರಣ ಮತ್ತು ಅಧಿಕಾರ ವಿಕೇಂದ್ರೀಕರಣದ ಪರ ಹೋರಾಟ ಮಾಡಿದರು. ಇಂದಿನ ಎನ್.ಇ.ಪಿ.ಶಿಕ್ಷಣ ಗೌಡರ ತತ್ವಕ್ಕೆ ವಿರೋಧವಾಗಿದೆ ಎಂದರು.

ಪುಟ್ಟಯ್ಯ ನವರು ಮಾತನಾಡಿ ನನಗೂ ಗೋಪಾಲಗೌಡರಿಗೂ ಹದಿನಾರು ವರ್ಷದ ಸಂಬಂಧ.  ಮೊದಲ ಚುನಾವಣೆಯಲ್ಲಿ ಕೇವಲ 6 ಸಾವಿರ ಖರ್ಚು ಮಾಡಿ ಗೌಡರು ಗೆದ್ದರು. ಇಂದು ಕೋಟಿ ಇದ್ದರೂ ಸಾಲದು. ಗೌಡರು ಏಕೀಕರಣದ ಪರವಾಗಿದ್ದರು. ದಸರಾವನ್ನು ಮೈಸೂರಿನಲ್ಲಿ ವಿರೋಧಿಸಿ ಮೆರವಣಿಗೆ ಮಾಡಿದ್ದರು. ದಲಿತ ಕಾರ್ಮಿಕ ಅಲ್ಪಸಂಖ್ಯಾತರ ಪರ ಗೋಪಾಲಗೌಡರು ಹೋರಾಟ ಮಾಡಿದ್ದರು. ಅವರ ಜೀವನವೇ ಯುವಕರಿಗೆ ಮಾದರಿ ಎಂದರು.

ವೇದಿಕೆಯಲ್ಲಿ ಹಿರಿಯ ಸಮಾಜವಾದಿ ಪುಟ್ಟಯ್ಯ ಅಕ್ಷತಾ ಉಪಸ್ಥಿತರಿದ್ದರು ಎಂ.ಗುರುಮೂರ್ತಿಯವರು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ವಕೀಲ ಕೆ.ಪಿ.ಶ್ರೀಪಾಲರವರು ನಿರೂಪಣೆಯನ್ನು ಭಾಸ್ಕರ್ ರವರು ಮಾಡಿದರು.

admin

admin

Leave a Reply

Your email address will not be published. Required fields are marked *

error: Content is protected !!