ನಿವೃತ್ತಿ ಹೊಂದುವ ಶಿಕ್ಷಕರ ಪ್ರಮಾಣದಷ್ಟೇ ಹೊಸ ಶಿಕ್ಷಕರ ನೇಮಕಾತಿಗೆ ವ್ಯವಸ್ಥೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸುದ್ದಿ360 ಬೆಂಗಳೂರು, ಸೆ.05: ಮುಂಬರುವ ದಿನಗಳಲ್ಲಿ ಪ್ರತಿ ವರ್ಷ ನಿವೃತ್ತಿ ಹೊಂದುವ ಶಿಕ್ಷಕರ ಪ್ರಮಾಣದಷ್ಟೇ ಹೊಸ ಶಿಕ್ಷಕರನ್ನು ಹಿಂದಿನ ವರ್ಷವೇ ನೇಮಿಸಿ, ತರಬೇತಿ ನೀಡಿ, ನಿವೃತ್ತಿ ಹೊಂದಲಿರುವ ಶಿಕ್ಷಕರ ಸ್ಥಾನಕ್ಕೆ ಅವರನ್ನು ನೇಮಿಸುವ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಿಕ್ಷಣ ಕ್ಷೇತ್ರಕ್ಕೆ 25 ಸಾವಿರ ಕೋಟಿ ರೂ. ಅನುದಾನ ಬಜೆಟ್ ನಲ್ಲಿ ನೀಡಲಾಗಿದೆ. 19 ಸಾವಿರ ಕೋಟಿ ರೂ. ಶಿಕ್ಷಕರ ಸಂಬಳ, 5000 ಕೋಟಿ ರೂ. ಶಾಲೆಗಳ ಅಭಿವೃದ್ಧಿಗಾಗಿ ನೀಡಲಾಗಿದೆ. ಒಂದೇ ವರ್ಷದಲ್ಲಿ 8101 ಶಾಲಾ ಕೊಠಡಿಗಳನ್ನು ನಿರ್ಮಿಸುವ ರಾಜ್ಯದ ಇತಿಹಾಸದಲ್ಲೇ ಮೊದಲು. 23 ಸಾವಿರ ಶಾಲಾ ಕೊಠಡಿಗಳನ್ನು ಪುನ: ನಿರ್ಮಿಸಬೇಕಾಗಿದ್ದು, ಪ್ರಥಮ ಹಂತದಲ್ಲಿ 8101 ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಉತ್ತಮ ಶಾಲೆಗಳಿದ್ದರು, ಉತ್ತಮ ಶಾಲಾ ಕೊಠಡಿಗಳು ಇಲ್ಲದಿದ್ದ ಕಾರಣ , ಈ ದಾಖಲೆಯ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದರು.

ರಾಧಾಕೃಷ್ಣನ್ ಒಬ್ಬ ಶ್ರೇಷ್ಠ ಗುರುಗಳು ಹಾಗೂ  ಮೇಧಾವಿಗಳು.  ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಮಾಡಿ ಶಿಕ್ಷಕರ ಸ್ಥಿತಿಗತಿ, ಚರ್ಚೆ, ಪರಿಹಾರ,  ಒಳ್ಳೆ ಕೆಲಸ ಮಾಡಿದವರನ್ನು ಗುರುತಿಸುವ ಪರಂಪರೆ ಇದೆ.  ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣ್ಣುಮಕ್ಕಳ   ಶಿಕ್ಷಣದಲ್ಲಿ ದೊಡ್ಡ ಬದಲಾವಣೆಯನ್ನು ತಂದ ಶ್ರೇಷ್ಠ ವ್ಯಕ್ತಿ. ಈ ಜಗತ್ತಿನಲ್ಲಿ ಬದಲಾವಣೆಗಳು ಕೇವಲ ವ್ಯಕ್ತಿಯಿಂದ ಸಾಧ್ಯವಾಗಿದೆ. ದೇಶ ಕಂಡ  ಅಪ್ರತಿಮ ಶ್ರೇಷ್ಠ ಶಿಕ್ಷಕಿ. ಶಿಕ್ಷಣದಲ್ಲಿ ಕ್ರಾಂತಿ ತಂದ ಸಾವಿತ್ರಿ ಬಾಯಿ ಫುಲೆ ಅವರನ್ನು ಸ್ಮರಿಸಬೇಕು. ವರ್ಷವಿಡೀ ಕಷ್ಟಪಟ್ಟು ಮಕ್ಕಳಿಗೆ ಜ್ಞಾನಾರ್ಜನೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವವರು ಶಿಕ್ಷಕರು. ಎಲ್ಲರಿಗೂ ಗೌರವ ತರುವ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪಡೆದ ಶಿಕ್ಷಕರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದರು.

ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ:

ಶೌಚಾಲಯ ವ್ಯವಸ್ಥೆಯಿಲ್ಲದ ಕಾರಣ ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿರುವುದನ್ನು ಗಮನಿಸಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಹೆಣ್ಣುಮಕ್ಕಳಿಗೆ ಹಾಗೂ ಗಂಡಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ಪ್ರತ್ಯೇಕವಾಗಿ ಒಂದೇ ವರ್ಷದಲ್ಲಿ ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಆಗಸ್ಟ್ 15 ರಂದು ಈ ಯೋಜನೆಯನ್ನು ಘೋಷಿಸಲಾಗಿದ್ದು, ಮುಂದಿನ ಆಗಸ್ಟ್ 15 ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. 4000 ಅಂಗನವಾಡಿ ಕೇಂದ್ರಗಳನ್ನು ಮುಂದಿನ ಆಗಸ್ಟ್ 15 ರೊಳಗೆ ನಿರ್ಮಿಸಲಾಗವುದು. 15000 ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಶಿಕ್ಷಣ ಕಾರ್ಯದೊತ್ತಡ ಕಡಿಮೆಗೊಳಿಸಲಾಗುವುದು ಎಂದರು.

ಶಿಕ್ಷಣದ ಜೀವಾಳ ಶಿಕ್ಷಕರು :

ಶಿಕ್ಷಣದ ಜೀವಾಳ ಶಿಕ್ಷಕರು. ಶಿಕ್ಷಕರಿಲ್ಲದೆ ಶಿಕ್ಷಣವನ್ನು ಊಹಿಸಲೂ ಸಾಧ್ಯವಿಲ್ಲ.  ಮಾನವ ಸಂಕುಲದ ಸಮಗ್ರ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಗುರುಗಳು ವಹಿಸಿದ್ದಾರೆ. ಜ್ಞಾನದ ಗುರುಗಳು, ಗುರುಕುಲದ ಗುರುಗಳು, ಹಲವಾರು ರಂಗದಲ್ಲಿ ವಿವಿಧ ಗುರುಗಳಿದ್ದಾರೆ. ಆಧುನಿಕ ವವ್ವಸ್ಥೆಯಲ್ಲಿ ಗುರುವಿನ ಪಾತ್ರ ನಿರ್ವಹಿಸುತ್ತಾರೆ ಎಂದರು.

ಬದುಕು ಎಲ್ಲಕ್ಕಿಂತ ದೊಡ್ಡ ಗುರು:

ಬದುಕು ಎಲ್ಲಕ್ಕಿಂತ ದೊಡ್ಡ ಗುರು.  ಬದುಕಿನಲ್ಲಿ ಕಲಿಯುವ ಪ್ರತಿಯೊಂದನ್ನೂ ಮನದಾಳದಲ್ಲಿ ಇಟ್ಟುಕೊಂಡರೆ, ಪ್ರತಿದಿನ, ಪ್ರತಿ ಹಂತದಲ್ಲಿ ನಾವು ಕಲಿಯಲು ಸಾಧ್ಯವಿದೆ.  ಬದುಕು ಮೊದಲು ಪರೀಕ್ಷೆ ನೀಡುತ್ತದೆ ನಂತರ ಫಲಿತಾಂಶ ಹಾಗೂ ಪಾಠ.  ಬದುಕಿನಲ್ಲಿಅನುಭವದಿಂದ ಪಾಠವನ್ನು ಕಲಿಯುತ್ತೇವೆ. ಆದರೆ ಈ ಬದುಕಿನಿಂದ ಪಾಠ ಕಲಿಯಲು ಸಿದ್ಧ ಮಾಡುವ ಕೆಲಸ ಶಿಕ್ಷಕರು ಮಾಡುತ್ತಿದ್ದಾರೆ.  ಒಬ್ಬ ವ್ಯಕ್ತಿಗೆ ಜ್ಞಾನ, ಸರಿ ತಪ್ಪು ಎಂಬ ಪ್ರಜ್ಞೆ, ಪಾಪ ಪುಣ್ಯ ಎಂಬ ವಿಚಾರ ಬರುವುದು ಶಿಕ್ಷಕರು ನೀಡುವ ಜ್ಞಾನದಿಂದ. ಶಿಕ್ಷಕರ ಕೆಲಸ ಅತ್ಯಂತ ಕಠಿಣ ಎಂದರು. ಶಿಕ್ಷಕರ ಕರ್ತವ್ಯ ಪ್ರಜ್ಞೆ ಮೆಚ್ಚುವಂಥದ್ದು.  ಮಗುವಿನ ಹಂತಕ್ಕೆ ಇಳಿದು ಅವರಿಗೆ ಅರ್ಥವಾಗುವ ಹಾಗೆ ಪಾಠ ಮಾಡಿ, ಜ್ಞಾನ, ತತ್ವಜ್ಞಾನ,  ತಂತ್ರಜ್ಞಾನ, ತಂತ್ರಾಂಶ ಜ್ಞಾನವನ್ನು ತುಂಬಿರುವ ಗುರುಗಳಿಗೆ ಮೊದಲನೇ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಚಾರಿತ್ರ್ಯವನ್ನು ಕಟ್ಟಬೇಕು :

 ನಮ್ಮ ದೇಶಕ್ಕೆ ಬಹಳ ದೊಡ್ಡ ಚರಿತ್ರೆ ಇದೆ.  ಆದರೆ ಬೇಕಾಗಿರುವುದು ಚಾರಿತ್ರ್ಯ.  ಚಾರಿತ್ರ್ಯ ಆತ್ಮಸಾಕ್ಷಿಯ ಬೋಧನೆಯಿಂದ ಬರುತ್ತದೆ. ಸರಿ ತಪ್ಪು  ಎನ್ನುವ ಭಾವ ಪ್ರತಿಯೊಬ್ಬರಲ್ಲೂ ಬಂದಾಗ  ಖಂಡಿತವಾಗಿಯೂ ಉತ್ತಮ ಚಾರಿತ್ರ್ಯ ಮೂಡುತ್ತದೆ. ಆ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ.   ಚಾರಿತ್ರ್ಯವನ್ನು ಕಟ್ಟುವ ಕೆಲ ಗುರುಗಳು ಮಾಡುತ್ತಿದ್ದಾರೆ.  ಅರಿವಿನಿಂದ, ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದಾಗ ಅದರ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಅಗುತ್ತದೆ.  ಪ್ರತಿಯೊಬ್ಬ ಗುರುಗಳು ಚಾರಿತ್ರ್ಯವನ್ನು ಕಟ್ಟುವ ಕೆಲಸವನ್ನು ಮಾಡಬೇಕು.  ಈ ದೇಶದಲ್ಲಿ ಆಚಾರ್ಯರಿದ್ದಾರೆ.  ಆದರೆ ಬೇಕಾಗಿರುವುದು ಆಚರಣೆ. ಆಚರಣೆ ತರಲು ಬುನಾದಿ ಶಿಕ್ಷಕರೇ ಮಾಡಬೇಕು. ಇದಾದರೆ ವ್ಯಕ್ತಿ ಯಶಸ್ವಿಯಾಗುತ್ತಾನೆ, ಸಮಾಜಕ್ಕೂ ಕೊಡುಗೆಯನ್ನು ನೀಡುತ್ತಾನೆ.  ಈ ಎರಡು ಕೆಲಸ ಮಾಡಬೇಕು ಎಂದರು.

ಬದಲಾವಣೆಗೆ ತೆರೆದುಕೊಳ್ಳಬೇಕು

ನಮ್ಮ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿದೆ.  ಶಿಕ್ಷಣ ನೀತಿ, ವ್ಯವಸ್ಥೆ, ಗುರುಗಳು, ವಿದ್ಯಾರ್ಥಿಗಳು ಎಲ್ಲಾ ವಿಚಾರಗಳನ್ನು ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕು. ಶಿಕ್ಷಣ ಯಾವ ರೀತಿ ಇರಬೇಕು, ಯಾತಕ್ಕಾಗಿ ಶಿಕ್ಷಣ ಎಂಬ ಮೂಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.  ವಿಜ್ಞಾನ ಯುಗಕ್ಕೆ, ಚಾರಿತ್ರ್ಯವನ್ನು ಕಟ್ಟಲು  ನಮ್ಮ ಮಕ್ಕಳನ್ನು ತಯಾರು ಮಾಡುತ್ತಿದ್ದೇವೋ ಇಲ್ಲವೋ.  ದೇಶಪ್ರೇಮದ ಕಲ್ಪನೆ ನಮ್ಮ ವಿದ್ಯಾರ್ಥಿಗಳಿಗೆ ಮುಟ್ಟಿಸಲು ಸಾಧ್ಯವಾಗಿದೆಯೇ ಎಂಬ ಬಗ್ಗೆ ಬದಲಾವಣೆ ಆಗುವ ಅವಶ್ಯಕತೆ ಇದೆ.  ಜಗತ್ತು ಬದಲಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ನಾವು ಕೂಡ ಬದಲಾವಣೆ ತಂದುಕೊಳ್ಳಬೇಕು. ಪ್ರತಿಯೊಬ್ಬ ಗುರುವೂ ವಿದ್ಯಾರ್ಥಿ ಸ್ವರೂಪವನ್ನು ಪಡೆದುಕೊಳ್ಳಬೇಕು.  ಸಾಯುವವರೆಗೂ ನಾವು ವಿದ್ಯಾರ್ಥಿಗಳೇ  ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಪಿ.ಇ. ಎಸ್.ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದೊರೈಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!