ಗಣೇಶ ಚತುರ್ಥಿ- ಈದ್‍ ಮಿಲಾದ್‍ –ಸೌಹಾರ್ಧಯುತ  ಆಚರಣೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ

ಸುಳ್ಳು ಸುದ್ದಿ- ಪ್ರಚೋದನಾಕಾರಿ ಹೇಳಿಕೆ – ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ – ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್

 ಸುದ್ದಿ360, ದಾವಣಗೆರೆ ಸೆ.8:  ಎಲ್ಲ ಧರ್ಮಗಳ ಜನರ ನಡುವಿನ ಬಾಂಧವ್ಯದಿಂದಾಗಿ ದಾವಣಗೆರೆ ಐಕ್ಯತೆಯ ನಾಡಾಗಿ ಗುರುತಿಸಿಕೊಂಡಿದೆ.  ಈ ಬಾರಿ ಎರಡು ಪ್ರಮುಖ ಧರ್ಮಗಳ ಹಬ್ಬಗಳು ಜತೆಜತೆಗೆ ಬಂದಿದ್ದು, ಸೌಹಾರ್ದತೆ ಕಾಪಾಡಿಕೊಳ್ಳುವ ಜವಾಬ್ದಾರಿ ಎಲ್ಲ ನಾಗರಿಕರ ಮೇಲಿದೆ. ಎಲ್ಲರೂ ಒಂದೇ ಗೂಡಿನ ಹಕ್ಕಿಗಳು ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ ಮಾಡಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇಂದು ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿ ಸೌಹಾರ್ದತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ  ಅವರು, ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿ ಮತ್ತು ಸೆ. 28 ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಿದ್ಧವಿದೆ. ಹಬ್ಬದ ವೇಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸರಾಗ ಮೆರವಣಿಗೆಗೆ ಅನುವು ಮಾಡಿಕೊಡಲಾಗುವುದು ಎಂದರು.

ನೀರಿನ ಮೂಲ ಕಲುಷಿತವಾಗದಂತೆ ಗಣೇಶನ ವಿಸರ್ಜನೆ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿ ಸಾಗರದಲ್ಲಿ 6 ಜಾಕ್‍ವೆಲ್‍ಗಳಿದ್ದು ಅದರ ಒಂದರಲ್ಲಿ ಮಾತ್ರ ಕುಡಿಯಲು ಯೋಗ್ಯವಲ್ಲ ಎಂದು ಈ ಮೊದಲು ಪರೀಕ್ಷಾ ವರದಿಯಲ್ಲಿ ಬಂದಿತ್ತು, ನಂತರದಲ್ಲಿ ಸರಿಯಾದ ವರದಿ ಬಂದಿರುತ್ತದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೆಲ್ಲದ ಗಣೇಶನ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ.

– ಸುರೇಶ್ ಇಟ್ನಾಳ್ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಆಯಾ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗುವ  ಏಕಗವಾಕ್ಷಿಯಲ್ಲಿ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಬೇಕು. ಈ ಹಿಂದಿನ ಹಳೆಯ ಪದ್ಧತಿ, ನಿಯಮ ಅನುಸರಿಸಿ ಎಲ್ಲಾ ರೀತಿಯ ಸಿದ್ಧತೆ ಹಾಗೂ ಶಾಂತಿಯುತವಾಗಿ ಆಚರಿಸಬೇಕು. ಹೊಸದಾಗಿ ಸೂಕ್ಷ್ಮಯುತವಾದ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ.

ಉಮಾ ಪ್ರಶಾಂತ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

 ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದ ಸ್ಥಳಗಳಲ್ಲಿ ಬೆಳಕು ಹಾಗೂ ಸಿ.ಸಿ ಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು, ಆಯೋಜಕರೇ ಸಂಪೂರ್ಣ ಹೊಣೆ ಹೊರಬೇಕು, ಹಾಗೂ ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕು. ಹಬ್ಬದ ಆಚರಣೆಗಳಲ್ಲಿ ಪ್ರಚೋದನಾಕಾರಿ ಹೇಳಿಕೆ, ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಯಾವುದೇ ವಿದ್ಯುತ್ ಅವಘಡಗಳು ನಡೆಯದಂತೆ ಮೂರ್ತಿಗಳ ಕಡಿಮೆ ಎತ್ತರ, ಗಣಪತಿ ಅಲಂಕಾರ ಹಾಗೂ ಸಣ್ಣ ಗೋಪುರಗಳ ನಿರ್ಮಾಣ ಮಾಡಬೇಕು. ಧ್ವನಿವರ್ಧಕಗಳಿಗೆ ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಹಬ್ಬಗಳ ಆಚರಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆಚರಣಗೆ ಬಲವಂತವಾಗಿ ದೇಣಿಗೆ ಸಂಗ್ರಹಿಸಬಾರದು ಎಂದರು.

ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ಧತೆಯಿಂದ ಆಚರಣೆ ಮಾಡಬೇಕು. ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿರ್ಬಂಧ ಎಂದುಕೊಳ್ಳಬಾರದು. ಎಲ್ಲರೂ ಕಾನೂನನ್ನು ಗೌರವಿಸಬೇಕು, ಇಲಾಖೆಯು ಸಹ ಎಲ್ಲರಿಗೂ ಸಹಕಾರ ನೀಡಲಿದೆ.

ಉಮಾ ಪ್ರಶಾಂತ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಈ ವೇಳೆ ನಾಗರೀಕರು ಮಾತನಾಡಿ ದಾವಣಗೆರೆಯಲ್ಲಿ 1992 ರ ನಂತರ ಎಲ್ಲಾ ಹಬ್ಬಗಳನ್ನು ಬಹಳ ಸೌಹಾರ್ಧಯುತವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸೌಹಾರ್ಧತೆ ಇಲ್ಲದಿದ್ದಲ್ಲಿ ನಗರದ ಅಭಿವೃದ್ದಿ ಕುಂಟಿತವಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಒಕ್ಕೋರಲಿನಿಂದ ತಿಳಿಸಿ ಕುಡಿಯುವ ನೀರಿನ ಪೂರೈಕೆ, ಕಸ ವಿಲೇವಾರಿ, ಸಾರ್ವಜನಿಕ ಶಾಂತಿ ಕಾಪಾಡಲು ಹಬ್ಬದ ವೇಳೆ ಮದ್ಯಪಾನ ನಿಷೇಧ, ಸುಗಮ ಮೆರವಣಿಗೆಗೆ ಅವಕಾಶ ಮಾಡಿಕೊಡಲು ಮನವಿ ಮಾಡಿದರು.

 ಪಾಲಿಕೆಯಿಂದ ಗಣಪತಿ ವಿಸರ್ಜನೆಗೆ ಆಯ್ದ ಸ್ಥಳಗಳನ್ನು ಗುರುತಿಸಲಾಗುತ್ತದೆ ಮತ್ತು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವುದು, ನೀರು ಪೂರೈಕೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ರಕ್ಷಣಾಧಿಕಾರಿ ರಾಮಗೊಂಡ ಬಿ.ಬಸರಗಿ ಸೇರಿದಂತೆ ಅನೇಕ ನಾಗರೀಕರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

admin

admin

Leave a Reply

Your email address will not be published. Required fields are marked *

error: Content is protected !!